Friday, August 8, 2014

#ಭೈರಪ್ಪನವರ #ಯಾನ ದ ಕುರಿತು #ಗಿರಿಯಾನವಿಮರ್ಶೆ (ಭಾಗ -1, ಪುಟ 1-80/217ರ ವರೆಗೆ)

ದಿನಾಂಕ: 08-08-2014

#ಭೈರಪ್ಪನವರ #ಯಾನ ದ ಕುರಿತು #ಗಿರಿಯಾನವಿಮರ್ಶೆ (ಭಾಗ -1, ಪುಟ 1-80/217ರ ವರೆಗೆ)

#ಭೈರಪ್ಪನವರ #ಯಾನ ಒಂದು ಅಸಾಧಾರಣ ಅನುಭವ ಹಾಗೂ ಅನುಭೂತಿ! ವಾಸ್ತವಕ್ಕೆ ನಿಲುಕದ್ದು. ಅದ್ಬುತದೊಳಗೊಂದದ್ಭುತ, ವರ್ಣನಾತೀತ, ಅತ್ಯತಿಷ್ಟದಾಶಂಗುಲಂ ಅನ್ನುವ ರೀತಿಯ ಅನುಭವದ್ದು ಈ #ಯಾನದ ಪಯಣ!

ವಾಸ್ತವಕ್ಕೆ ನಿಲುಕದ್ದು ಅಂದಮಾತ್ರಕ್ಕೆ, ಕಾಣುವ ಕನಸಿಗೆ ಕೊಳ್ಳಿ ಇಡು ಎಂದರ್ಥವಲ್ಲ. ಕನಸನ್ನೇ ಕಾಣದಿದ್ದರೆ, ಇಂದಿನ ಮಾನವ ಜನಾಂಗ ತನ್ನ ಅಸಾಧಾರಣ ಭೌದ್ಧಿಕಶಕ್ತಿಯನ್ನು ಬಳಸಿ ಈ ಮಟ್ಟಿಗೆ ಮುಂದೆ ಬರಲಾಗುತ್ತಿರಲಿಲ್ಲವೇನೋ! ಅದಕ್ಕೇ ಇರಬೇಕು, ನಮ್ಮ ದೇಶದ ಹೆಮ್ಮೆಯಪುತ್ರ, #ವಿಙ್ಞಾನಿ, #ISRO, #DRDO #BrahMos ನಂತಹ ಬಾಹ್ಯಾಕಾಶ, ಕ್ಷಿಪಣಿ ತಂತ್ರಙ್ಞಾನಗಳ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ, ನಮ್ಮ ದೇಶದ ಮಾಜಿರಾಷ್ಟ್ರಪತಿ #Dr.APJ Abdul Kalam ರವರು ನಮಗೆ “ಕನಸನ್ನು ಕಾಣಿ, ಮತ್ತೆ ಅದನ್ನ ಸಾಕಾರಗೊಳಿಸುವ ನಿಟ್ಟಿನಲ್ಲಿ ನಿಮ್ಮ ಹೆಜ್ಜೆ ಇಡಿ” ಅಂದದ್ದು.

ಹಾಗೆಯೇ, ಭೈರಪ್ಪನವರ ಯಾನ ಕೂಡ ಅತೀತ ಕಲ್ಪನಾಲೋಕದ, ಕನಸನ್ನು ನನಸಾಗಿಸುವ (ಆ ಕನಸು ನನಸಾಗಬಹುದು ಎಂದಾದರೊಂದು ದಿನ) ಒಂದು ಬೆರಗಿನ ಪರಿ.

#ಭೈರಪ್ಪನವರು, ಅಲ್ಲಲ್ಲಾ, #ಭೈರಪ್ಪನಂತಾ #ಬಲಪಂಥೀಯವಾದಿ ಭೈರಪ್ಪನವರು, ಬಲಪಂಥೀಯರು ಹಾಗೂ #ಎಡಪಂಥೀಯರಿಬ್ಬರೂ ಕೂಡ ಒಟ್ಟಿಗೇ ಮೂಗುಮುರಿಯುವಂತಹ ’ಅಕ್ಕ-ತಮ್ಮ’ರ #ಸೋದರಸಂಬಂಧಗಳ ನಡುವಿನ ಮದುವೆ, ದೈಹಿಕ ಸಂಪರ್ಕದ ವಿಷಯವನ್ನ ತಮ್ಮ ಮೊದಲ ಪುಟಗಳಲ್ಲಿಯೇ ಹರಿಯಬಿಟ್ಟಿದ್ದಾರೆ. ಬಹುಶ: ಇದರಿಂದ #ಎಡಪಂಥೀಯರು ಸ್ವಲ್ಪಮಟ್ಟಿಗೆ ಖುಷಿಪಡಬಹುದೇನೋ!
ಇದು ಇಂದಿನ ಸಮಾಜದ ಸಾಮಾಜಿಕ ಕಟ್ಟುಪಾಡು, ಸ್ಥಿತಿಗತಿಗಳಿಗೆ ವಿರುದ್ಧ ಹಾಗೂ ಅಸಹನೀಯವೆನಿಸಿದರೂ; ’ #ಈವ್ ಮತ್ತು #ಆಡಂ ’ರವರೇ ಇಂದಿನ ಮಾನವ ಜನಾಂಗದ ಸೃಷ್ಟಿಗೆ ಕಾರಣರಾದವರು ಎಂದು ಅಂದುಕೊಳ್ಳುವವರಿಗೆ, ಭೈರಪ್ಪನವರ ಈ ಕೃತಿಯಲ್ಲಿನ ’ಆ ಸೋದರಸಂಬಂಧದ ಬಗ್ಗೆ’ ಭೈರಪ್ಪನವರು ಹೊಸತೇನನ್ನೋ ಉಲ್ಲೇಖಿಸಿದ್ದಾರೆ ಅನ್ನಿಸಬಾರದು ಹಾಗೂ ಅನ್ನಿಸದೂ ಕೂಡ.
’ ಈವ್ ಮತ್ತು ಆಡಂ , ಅವರ ಮಕ್ಕಳು, ಆ ಮಕ್ಕಳಿಗೆ ಮತ್ತೆ ಮಕ್ಕಳು, ಮಗದೊಮ್ಮೆ,......... ಹೀಗೇ ಮಾನವ ಜನಾಂಗ ಬೆಳೆಯಿತು ಅಂದುಕೊಂಡಾಗ; #ವೈಙ್ಞಾನಿಕ ಕಾರಣಗಳಿಂದ ಭೂಮಿಯಿಂದ ನಭದಾಚೆಗೆ, ಸೂರ್ಯನ ಗುರುತ್ವಾಕರ್ಷಣೆಯನ್ನೂ ಮೀರಿ ಸಂಶೋಧನೆಯ ಹೆಸರಲ್ಲಿ, ದೇಶಭಕ್ತಿಯ ಉತ್ತುಂಗದಲ್ಲಿ, ತಾವೇನನ್ನೋ ಮಹತ್ತರವಾದದ್ದನ್ನು ಸಾಧಿಸಲೊರಟಿರುವೆವು ಎಂದುಕೊಂಡ, ಒಂದು ಜೋಡಿ ಹಕ್ಕಿಗಳು, ಸಂಶೋಧನೆಯ ಅಂಗವಾಗಿ ತಾವು ಭೂಮಿಯಲ್ಲಿ ಮಾಡಿದ ಪ್ರತಿಙ್ಞಾವಿಧಿಯಂತೆ ಮಕ್ಕಳನ್ನು ಮಾಡಿ (ಒಂದು ಗಂಡುಮಗು, ಒಂದು ಹೆಣ್ಣುಮಗು ಮಾತ್ರಾ), ಆ ಮಕ್ಕಳಿಗೆ ತಾವು ’ ಈವ್ ಮತ್ತು ಆಡಂ ’ರಂತೆಯೆ ಮುಂದಿನ ಪೀಳಿಗೆಯನ್ನ ಬೆಳೆಸಲು ಹಾಗೂ ಸಂಶೋಧನೆಯನ್ನು ಮುಂದುವರೆಸಲು ಆ ಅಕ್ಕ-ತಮ್ಮ ಕಲೆತು ಮುಂದಿನಜನಾಂಗವನ್ನ ಬೆಳೆಸಿ, ಅವರಿಗೆ ಗಣಿತಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ಕೃಷಿಶಾಸ್ತ್ರ. ಬಾಹ್ಯಾಕಾಶಶಾಸ್ತ್ರ ಮುಂತಾದವನ್ನ ಕಲಿಸಿ; ಬಾಹ್ಯಾಕಾಶದಲ್ಲಿ ಮುಂದಿನ ಮೂರು ಲಕ್ಷ ಕೋಟಿ ವರ್ಷಗಳವರೆಗೆ ಆ ಪೀಳಿಗೆಯನ್ನ ಮುಂದುವರೆಸಿಕೊಂಡು ಹೋಗಬೇಕಾದರೆ, ’ಆ ಸಂಬಂಧ’ಗಳಲ್ಲಿಯೂ ಕೂಡ ವಾಸ್ತವಕ್ಕೆ ನಿಲುಕದ, ಆದರೆ ಅನಿವಾರ್ಯತೆಯ ಕೂಡುವಿಕೆ ಸಾಧ್ಯವಾಗಲೇಬೇಕು ಮತ್ತು ಅನಿವಾರ್ಯ ಕೂಡ ಅನಿಸುತ್ತದೆ.

ಒಂದು ವಿಷಯವನ್ನ ಇಲ್ಲಿ ಮನದಟ್ಟು ಮಾಡಬಯಸುತ್ತೇನೆ. ಈ ಕಾದಂಬರಿಯನ್ನು ಬರೆಯುವ ಮೊದಲು, ಭೈರಪ್ಪನವರು ಅಗಾಧವಾದ ಅಭ್ಯಾಸ ಮಾಡಿದ್ದಾರೆ. ಗಣಿತಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ಕೃಷಿಶಾಸ್ತ್ರ. ಬಾಹ್ಯಾಕಾಶಶಾಸ್ತ್ರ, ವಿಙ್ಞಾನ, ತಂತ್ರಙ್ಞಾನ, ಇತ್ಯಾದಿ; ಹೀಗೆ ಒಬ್ಬ ಲೇಖಕ ಅಗಣಿತ, ಅವಿರತ ಅಭ್ಯಾಸಗಳನ್ನು ಮಾಡಿಕೊಂಡು ಪ್ರತಿಯೊಂದು ವಿಷಯಕ್ಕೂ ಪೂರಕವಾದ, ವೈಙ್ಞಾನಿಕವದ, ನಂಬಲರ್ಹವಾದ ವಿವರಗಳ ಸಮೇತ ಓದುಗನಿಗೆ ಉಣಬಡಿಸುವ ರೀತಿಯಲ್ಲಿ ಬಹುಶ: ಭೈರಪ್ಪನವರಿಗೆ ಭೈರಪ್ಪನವರೇ ಸಾಟಿಯೇನೋ ಅನಿಸದಿರದು. ಇದು ಅವರ ಕಾದಂಬರಿಗಳನ್ನ ಓದಿದ ನನ್ನ ಅನುಭವದ ಮಾತು.

ಬಾಹ್ಯಾಕಾಶದ ತುತ್ತದಿಯ ಯಾನದ ಕುರಿತ ಒಂದೆಳೆಯ ಅಂಶದೊಂದಿಗೆ, ಭೂಮಿಯ ಮೇಲಿನ ಸಂಬಂಧಗಳು, ತಲ್ಲಣಗಳು, ಆಚಾರ-ವಿಚಾರಗಳು, ಕಾನೂನು, ಬದುಕು ಇತ್ಯಾದಿಗಳನ್ನ ಗಮನದಲ್ಲಿಟ್ಟುಕೊಂಡು, ತಮ್ಮ ಅನುಭವ ಹಾಗೂ ಅನುಭಾವಗಳ ಸಂಕೀರ್ಣ ಮಿಳಿತದಲ್ಲಿ ನೇಯ್ದಿರುವ / ಎರಕವನ್ನೆರೆದಿರುವ ಆಕರವೇ ’ಯಾನ’.
ಇದು ಸಂತೆಗೆ ಮುಂಚೆ ಮೂರು ಮೊಳ ಸೀರೆ ನೇದು, ಅದನ್ನೇ ದೊಡ್ಡದು ಎಂದು ಹೇಳಿಕೊಳ್ಳುವವರಿಗೆ ಮಾತ್ರ ಅರ್ಥವಾಗದ ವಿಚಾರವಾದೀತೇ ಹೊರತು, ಉಳಿದವರಿಗೆ ಅದರ ಆಳ-ಅಗಲ ಅರ್ಥವಾದೀತು.

ನಾವು ಮೊನ್ನೆ ಮೊನ್ನೆಯಷ್ಟೇ, ಮಂಗಳ ಗ್ರಹದ ಬಗ್ಗೆ ಸ್ವಲ್ಪ ಸ್ವಲ್ಪವೇ ತಿಳಿದುಕೊಂಡಿರುವ / ತಿಳ್ದುಕೊಳ್ಳುತ್ತಿರುವ ಈ ಸಮಯದಲ್ಲಿ, ಅದರಲ್ಲೂ ನಾವಿನ್ನೂ ಮಾನವಸಹಿತ ಮಂಗಳಯಾನವನ್ನ ಮಾಡವ ನಿಟ್ಟಿನಲ್ಲಿ ಇನ್ನೂ ಹಸುಗೂಸುಗಳಂತಿರುವಾಗ; “30-40 ವರ್ಷಗಳ ಒಂದು ದೀರ್ಘ ಪ್ರಯಾಣದಲ್ಲಿ, ಸೂರ್ಯನ ಗುರುತ್ವಾಕರ್ಷಣೆಯಿಂದಾಚೆಗೆ ಹೋಗಿ, ’#ಪ್ರಾಕ್ಸಿಮಾ ಸೆಂಟಾರಿಸ್’ ಎಂಬ ನಕ್ಷತ್ರಪುಂಜದ ವಲಯಕ್ಕೆ ಪ್ರಯಾಣ ಮಾಡಿ, ಅಲ್ಲಿ ಮಾನವ ವಾಸಿಸಲೋಗ್ಯವಾದ ಗ್ರಹವಿದೆಯೇ ಅನ್ನೋದನ್ನ, ಭಾರತೀಯ ವಿಙ್ಞಾನಿಗಳು ಕಲ್ಪಿಸಿಕೊಂಡು, ಅದಕ್ಕೆ ಬೇಕಾಗುವ ಬಾಹ್ಯಾಕಾಶನೌಕೆ, ಅದರಲ್ಲಿ ಮನುಷ್ಯ ಅಷ್ಟು ದೀರ್ಘವಾದ ವರ್ಷಗಳ ಕಾಲ ಬದುಕಲು ಬೇಕಾದ ಅವಶ್ಯಕತೆಗಳು, ಮತ್ತೆ ಆ ಅವಶ್ಯಕ ವಸ್ತುಗಳ ಉತ್ಪಾದನೆಯನ್ನು ಸ್ವತ: ಅಲ್ಲಿಯೇ ಮಾಡಿಕೊಳ್ಳುವ ಯೋಜನೆ” – ಭೈರಪ್ಪನಂತಾ ಇಳಿವಯಸ್ಸಿನ ವಿಙ್ಞಾನಿಯಲ್ಲದ, ಕೇವಲ ಸಾಹಿತಿಯ ತಲೆಯಲ್ಲಿ ಬಂದಿರಬೇಕಾದರೆ; ಇನ್ನು ವಿಙ್ಞಾನವನ್ನೇ ಅರೆದು ಕುಡಿದವರಲ್ಲಿ ಇನ್ನೆಂತಹ ಙ್ಞಾನ, ವಿಷಯಗಳಿರುತ್ತವೆಯೋ ಅನ್ನೋ ಕುತೂಹಲ ಬಹುಶ: ಓದುಗನನ್ನ ಕಾಡದೇ ಇರದು, ನೀವೀಕಾದಂಬರಿಯನ್ನೋದುವಾಗ!


ಓದುಗನಾಗಿ ಇದು ಯಾನ ಕಾದಂಬರಿಯ ಪುಟಸಂಖ್ಯೆ 1-80/217ರ ವರೆಗಿನ ಅನುಭವದ ಮಾತುಗಳು. ಮುಂದಿನ ಪುಟಗಳ ಅನುಭವ ಮುಂದಿನಸಲ.